NICE : ನೈಸ್ ಅಕ್ರಮದ ವಿರುದ್ಧ ಜೆಡಿಎಸ್ ಅಭಿಯಾನ – “ನಥಿಂಗ್ ನೈಸ್” ಲಾಂಚ್ ಮಾಡಿದ ನಿಖಿಲ್

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಲ್ಲಿ ನೈಸ್ ಕಂಪನಿ ನಡೆಸಿದೆ ಎನ್ನಲಾದ ವ್ಯಾಪಕ ಅಕ್ರಮಗಳ ವಿರುದ್ಧ ಜೆಡಿಎಸ್ ಯುವ ಘಟಕ ಬೃಹತ್ ಹೋರಾಟ ಆರಂಭಿಸಿದೆ. ಈ ಹೋರಾಟದ ಭಾಗವಾಗಿ ನಥಿಂಗ್ ನೈಸ್ ಹೆಸರಿನ ಜನಾಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಯೋಜನೆಗೆ ಸಂಬಂಧಿಸಿದ ಎಲ್ಲಾ ದಾಖಲೆ, ಸತ್ಯಾಂಶಗಳನ್ನು ಜನರಿಗೆ ತಲುಪಿಸಲು ವಿಶೇಷ ವೆಬ್ ತಾಣವನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಈ ಜಾಲತಾಣದ ಪೋಸ್ಟರ್ ಮತ್ತು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದರು.

ಬಿಎಂಐಸಿ ಒಪ್ಪಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ನೈಸ್ ಸಂಸ್ಥೆಯೊಂದಿಗೆ ಆಗಿತ್ತು. ಒಪ್ಪಂದದ ಪ್ರಕಾರ 111 ಕಿ.ಮೀ ಎಕ್ಸ್ ಪ್ರೆಸ್ ಹೆದ್ದಾರಿ, 41 ಕಿ.ಮೀ ಪೆರಿಫೆರಲ್ ರಸ್ತೆ ಮತ್ತು 9.8 ಕಿ.ಮೀ ಲಿಂಕ್ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ 26 ವರ್ಷ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಪೆರಿಫೆರಲ್ ರಸ್ತೆಗಾಗಿ 554 ಎಕರೆ ಫಲವತ್ತಾದ ಜಮೀನು ಪಡೆದು ಕಾಂಕ್ರೀಟ್ ಬದಲು ಕಳಪೆ ಡಾಂಬರು ರಸ್ತೆ ಮಾಡಲಾಗಿದೆ. ಸದನ ಸಮಿತಿಯೇ 22 ಷರತ್ತುಗಳಲ್ಲಿ 16 ಉಲ್ಲಂಘನೆಯಾಗಿದೆ ಎಂದು ವರದಿ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ವಶಪಡಿಸಿಕೊಂಡ ಜಮೀನನ್ನು ರೈತರಿಗೆ ವಾಪಸ್ ನೀಡಬೇಕು ಅಥವಾ ಮಾರುಕಟ್ಟೆ ದರದಲ್ಲಿ ಬಡ್ಡಿ ಸಮೇತ ಪರಿಹಾರ ಕೊಡಬೇಕು ಮತ್ತು ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ನಿಖಿಲ್ ಒತ್ತಾಯಿಸಿದರು. ಟೋಲ್ ವಸೂಲಿ ಸಮಂಜಸವೇ ಎಂಬ ಗೊಂದಲಕ್ಕೆ ವೆಬ್ ಸೈಟ್ ನಲ್ಲಿ ಉತ್ತರ ಸಿಗಲಿದೆ ಎಂದರು.

ಈ ಬೆಳವಣಿಗೆ ಕೇವಲ ರಸ್ತೆ ವಿವಾದವಾಗಿ ಉಳಿದಿಲ್ಲ. ಇದು ದಶಕಗಳಿಂದ ನೆನೆಗುದಿಗೆ ಬಿದ್ದ ಭೂಸ್ವಾಧೀನ ಮತ್ತು ರೈತರ ಬದುಕಿನ ಪ್ರಶ್ನೆಯಾಗಿದೆ. ಜೆಡಿಎಸ್ ಈ ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ತನ್ನ ಮೂಲ ಮತಬ್ಯಾಂಕ್ ಆದ ರೈತ ಸಮುದಾಯದ ವಿಶ್ವಾಸವನ್ನು ಮತ್ತೆ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.

ರಾಜ್ಯ ಸರ್ಕಾರದ ವಿರುದ್ಧ ರಿಯಲ್ ಎಸ್ಟೇಟ್ ಪರ ನಿಲುವಿನ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಆಡಳಿತವನ್ನು ನೇರವಾಗಿ ಗುರಿಯಾಗಿಸಲಾಗಿದೆ. ಬಿಡದಿ ಟೌನ್ ಶಿಪ್ ಮತ್ತು ಉದ್ಯಾನ ನಗರಗಳಲ್ಲಿ ಶೇ 5 ವಾಣಿಜ್ಯ ಬಳಕೆಗೆ ಅವಕಾಶ ನೀಡುವ ಪ್ರಸ್ತಾವವನ್ನು ಇದಕ್ಕೆ ಜೋಡಿಸಿ ಟೀಕಿಸಲಾಗುತ್ತಿದೆ. ಇದರಿಂದ ನೈಸ್ ಹೋರಾಟಕ್ಕೆ ವಿಶಾಲವಾದ ನಗರಾಭಿವೃದ್ಧಿ ನೀತಿಯ ಆಯಾಮವೂ ಸಿಕ್ಕಿದೆ.

ಹೀಗಾಗಿ ಮುಂಬರುವ ದಿನಗಳಲ್ಲಿ ಈ ಅಭಿಯಾನ ಡಿಜಿಟಲ್ ಮೂಲಕ ಹಳ್ಳಿ ಹಳ್ಳಿಗೆ ತಲುಪಿದರೆ, ದಾಖಲೆ ಸಹಿತ ಜನರ ಮುಂದಿಡುವ ತಂತ್ರವು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಬಹುದು. ಜೊತೆಗೆ ಎನ್ ಡಿಎ ಮೈತ್ರಿಯನ್ನು ಬಲಪಡಿಸುವ ಹೇಳಿಕೆಗಳ ಮೂಲಕ ಜೆಡಿಎಸ್-ಬಿಜೆಪಿ ಹೊಂದಾಣಿಕೆಯ ಸಂದೇಶವನ್ನೂ ಈ ವೇದಿಕೆಯಿಂದ ನೀಡಲಾಗಿದೆ.