@pavithra.gowda.__ (Instagram)
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರಿಗೆ ನ್ಯಾಯಾಲಯದಿಂದ ಕೊಂಚ ರಿಲೀಫ್ ದೊರೆತಿದೆ. ಜೈಲಿನಲ್ಲಿರುವ ತಮ್ಮ ಬ್ಯಾರಕ್ ಬದಲಾಯಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.
ಪ್ರಸ್ತುತ ತಾವು ಇರುವ ಬ್ಯಾರಕ್ನಲ್ಲಿ ಹಲವು ನೈರ್ಮಲ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಪವಿತ್ರಾ ಗೌಡ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಇದೀಗ ಪ್ರಮುಖ ಆದೇಶ ಹೊರಡಿಸಿದೆ.
ಆರೋಪಿಯ ಆರೋಗ್ಯ ಸ್ಥಿತಿಯ ಹಿತದೃಷ್ಟಿಯಿಂದ ಅವರನ್ನು ತಕ್ಷಣವೇ ಬೇರೆ ಬ್ಯಾರಕ್ಗೆ ಸ್ಥಳಾಂತರಿಸುವಂತೆ 59ನೇ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಶೌಚಾಲಯದ ಕೊರತೆ ಮತ್ತು ಸೋಂಕು: ಪವಿತ್ರಾ ಗೌಡ ಮನವಿ
ಪ್ರಸ್ತುತ ತಾವು ಇರುವ ಜೈಲಿನ ಬ್ಯಾರಕ್ನಲ್ಲಿ 20 ರಿಂದ 30 ಜನ ಮಹಿಳಾ ಕೈದಿಗಳಿದ್ದಾರೆ ಎಂದು ಪವಿತ್ರಾ ಗೌಡ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇಷ್ಟೊಂದು ಜನರಿಗೆ ಕೇವಲ ಎರಡು ಶೌಚಾಲಯಗಳಿದ್ದು, ಅದರಲ್ಲಿಯೂ ಒಂದು ಶೌಚಾಲಯ ಹಾಳಾಗಿದೆ ಎಂದು ದೂರಿದ್ದರು.
ಒಂದೇ ಶೌಚಾಲಯವನ್ನು ಎಲ್ಲರೂ ಬಳಸುವುದರಿಂದ ತಮಗೆ ತೀವ್ರ ಚರ್ಮದ ಸೋಂಕು ಹಾಗೂ ಅಲರ್ಜಿ ಎದುರಾಗಿದೆ ಎಂದು ಅವರು ಕೋರ್ಟ್ಗೆ ತಿಳಿಸಿದ್ದರು. ಜೊತೆಗೆ ಸರಿಯಾದ ನಿದ್ದೆಯಿಲ್ಲದೆ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು.
ಪವಿತ್ರಾ ಗೌಡ ಅವರ ಈ ಆರೋಗ್ಯದ ಕಾಳಜಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಜೈಲು ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳಿಗೆ ಅನುಮತಿ ನೀಡಿದ್ದಾರೆ.
ಜೈಲು ಮ್ಯಾನ್ಯುಯಲ್ ಪ್ರಕಾರ ಪ್ರಕ್ರಿಯೆ: ಷರತ್ತು ವಿಧಿಸಿದ ಕೋರ್ಟ್
ಅರ್ಜಿಯನ್ನು ಪುರಸ್ಕರಿಸಿರುವ 59ನೇ ಸಿಸಿಹೆಚ್ ಕೋರ್ಟ್, ಜೈಲು ಮ್ಯಾನ್ಯುಯಲ್ ಹಾಗೂ ನಿಯಮಗಳ ಪ್ರಕಾರವೇ ಈ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪವಿತ್ರಾ ಗೌಡ ಅವರಿಗೆ ಈ ಕೋರ್ಟ್ ಆದೇಶದಿಂದ ದೊಡ್ಡ ಸಮಾಧಾನ ಸಿಕ್ಕಂತಾಗಿದೆ. ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಅವರಿಗೆ ಇದು ಮುಖ್ಯ ಬೆಳವಣಿಗೆಯಾಗಿದೆ.
ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದ್ದು, ಪವಿತ್ರಾ ಗೌಡ ಅವರ ಈ ಬ್ಯಾರಕ್ ಬದಲಾವಣೆ ಪ್ರಕ್ರಿಯೆ ಶೀಘ್ರದಲ್ಲೇ ಜೈಲಿನಲ್ಲಿ ನಡೆಯಲಿದೆ.




